
ಅಧಿಕಾರದ ವ್ಯಾಮೋಹದಿಂದ ಆಡಳಿತ ಪಕ್ಷದವರು ವಿರೋಧ ಪಕ್ಷದವರನ್ನು, ವಿರೋಧ ಪಕ್ಷದವರು ಆಡಳಿತ ಪಕ್ಷದವರನ್ನು ಕಾಲು ಎಳೆಯುವುದನ್ನು ತಳ ಮಟ್ಟದ ಪಂಚಾಯತ್ ವ್ಯವಸ್ಥೆಯಿಂದ ಸರಕಾರದ ಮಟ್ಟದವರೆಗೆ ದಿನ ನಿತ್ಯ ನೋಡುತ್ತಿರುತ್ತೇವೆ. ವಿವಿಧ ಪಕ್ಷದಿಂದ ಚುನಾಯಿತರಾದ ಜನಪ್ರತಿನಿಧಿಗಳು ಪ್ರಜಾಪ್ರಭುತ್ವದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಾ ತಮ್ಮ ಪಕ್ಷದ ಸಿದ್ದಾಂತ ಒಪ್ಪಿಕೊಳ್ಳುತ್ತಾ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.
ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಒಂದು ಕನಸನ್ನು ಕಾಣುತ್ತಾರೆ. ವರ್ಷದ 365 ದಿನ ರಾಜಕೀಯವಾಗಿ ಬಡಿದಾಡಿಕೊಳ್ಳುವ ಜನಪ್ರತಿನಿಧಿಗಳು ಒಂದು ದಿನ ನಾವೆಲ್ಲರೂ ಒಂದೇ ಎಂದು ಪಕ್ಷ ಬೇಧ ಮರೆತು ಒಂದೇ ವೇದಿಕೆಯಡಿಯಲ್ಲಿ ಎಲ್ಲರನ್ನು ತಂದು ಜನಪ್ರತಿನಿಧಿಗಳ ಸಂಗಮ ಎಂಬಂತೆ 2016 ರಲ್ಲಿ ಉಡುಪಿ-ದ.ಕ ಜಿಲ್ಲೆಗಳ ಜನಪ್ರತಿನಿಧಿಗಳ ಸಾಂಸ್ಕೃತಿಕ -ಕ್ರೀಡಾ ಸ್ಪರ್ಧೆ ಹೊಳಪು ಎಂಬ ಕಾರ್ಯಕ್ರಮದ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಗಳ ಸಬಲೀಕರಣದತ್ತ ದಿಟ್ಟ ಹೆಜ್ಜೆ ಇಟ್ಟರು.
ಕೋಟತಟ್ಟು ಗ್ರಾಮ ಪಂಚಾಯತ್, ಕಾರಂತ ಪ್ರತಿಷ್ಠಾನ(ರಿ.)ಕೋಟ ಇವರ ಆಶ್ರಯದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರ ಮುಂದಾಳತ್ವದಲ್ಲಿ 2016 ರಿಂದ ಹೊಳಪು ಕ್ರೀಡಾಕೂಟ ಆಯೋಜನೆಗೊಂಡಿತು. ಸಂಘಟನೆಗೆ ಜೀವ ತುಂಬುವ ಸಚಿವರು ಹಾಗೂ ಅವರ ತಂಡ ಎರಡು ಅವಿಭಜಿತ ಜಿಲ್ಲೆಗಳ ಒಟ್ಟು 414 ಸ್ಥಳೀಯಾಡಳಿತ ಗ್ರಾಮ ಪಂಚಾಯತ್ಗಳಿಗೆ ತೆರಳಿ ಆಮಂತ್ರಣ ಪತ್ರಿಕೆ ನೀಡಿ ಅವರನ್ನು ಪ್ರೀತಿಯಿಂದ ಆಹ್ವಾನಿಸುವುದು ಒಂದು ಹೊಳಪಿನ ವಿಶೇಷ. ಒಂದು ದಿನದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿ ಅಭ್ಯಾಗತರು, ಸಚಿವರು ಕಾರ್ಯಕ್ರಮಕ್ಕೆ ಹಾಜರಾಗಿ ಸ್ಪರ್ಧಾಳು ಜನಪ್ರತಿನಿಧಿಗಳಿಗೆ ಹುಮ್ಮಸ್ಮು ಹೆಚ್ಚಿಸುತ್ತಾರೆ. ಪ್ರತಿ ಗ್ರಾಮ ಪಂಚಾಯತ್ ಗಳಿಗೆ ವಿಶೇಷವಾಗಿ ‘ಪಥ ಸಂಚಲನ’ ಸ್ಪರ್ಧೆ ಅದಕ್ಕೆ ನಗದು ಪುರಸ್ಕಾರದೊಂದಿಗೆ ಆಕರ್ಷಕ ಗೌರವ ಸ್ಮರಣಿಕೆ, ಪಥ ಸಂಚಲನವು ಒಂದಕ್ಕಿಂತ ಒಂದು ನಾವೇನು ಕಮ್ಮಿ ಎಂಬಂತೆ ಅವರ ಊರಿನ ಸೊಬಗು ಅಲ್ಲದೇ ಯಾವುದಾದರೊಂದು ಮಾದರಿಯಲ್ಲಿ ಪಥ ಸಂಚಲನಕ್ಕೆ ತಂಡವಾಗಿ ಗ್ರಾಮ ಸ್ವರಾಜ್ಯದ ಕಲ್ಪನೆ ಸಾಕಾರಗೊಳ್ಳುವಂತೆ ಹೆಜ್ಜೆ ಹಾಕುತ್ತಾರೆ. ಪಥ ಸಂಚಲನವು ಆಗಮಿಸಿದ ಪ್ರತಿಯೊಬ್ಬರ ಕಣ್ಮನ ಸೆಳೆಯುವುದರಲ್ಲಿ ಆಶ್ಚರ್ಯವಿಲ್ಲ. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸೂಪರ್ ಮಿನಿಟ್, ಗಾಯನ, ಛದ್ಮವೇಷ. ಕ್ರೀಡಾ ಸ್ಪರ್ಧೆಯಲ್ಲಿ 100 ಮೀಟರ್ ಓಟ, ಗುಂಡು ಎಸೆತ, ರಿಂಗ್ ಇನ್ ದಿ ವಿಕೆಟ್, ಮಡಿಕೆ ಒಡೆಯವುದು, ಗುಂಪು ಸ್ಪರ್ಧೆಯಲ್ಲಿ ಹಗ್ಗ ಜಗ್ಗಾಟ, ತ್ರೋಬಾಲ್, ಸ್ಪರ್ಧೆ ಗಳು ಜನಪ್ರತಿನಿಧಿಗಳಿಗೆ ಆಯೋಜಿಸಲಾಗಿರುತ್ತದೆ. ಪ್ರತಿ ಸ್ಪರ್ಧಾಳುಗಳಿಗೆ ಸಮವಸ್ತ್ರ ಹಾಗೂ ಟೋಪಿ ನೀಡಲಾಗುತ್ತದೆ. ರಾಜಕೀಯವಾಗಿ ದಿನ ನಿತ್ಯ ಕಾಲು ಎಳೆಯುವವರು ಇಲ್ಲಿ ಸ್ಪರ್ಧೆಯ ಮೂಲಕ ಜಿದ್ದಾ ಜಿದ್ದಿನಲ್ಲಿ ಸೆಣೆಸಾಡುತ್ತಾರೆ. ನಾವು ಬೇರೆ ಬೇರೆ ಪಕ್ಷದಿಂದ ಚುನಾಯಿತರಾದವರು ಎಂಬುದನ್ನು ಮರೆತು ಒಗ್ಗಟ್ಟಿನ ಪ್ರದರ್ಶನ ತೋರಿ ಗೆಲುವಿನ ನಗು ಬೀರುತ್ತಾರೆ.
ಹೊಳಪು ಕಾರ್ಯಕ್ರಮದಲ್ಲಿ ಸ್ವಾಗತ ಗೋಪುರ ನಿಮ್ಮನ್ನು ಆಕರ್ಷಿಸದೇ ಇರಲಾರದು. ಅಲ್ಲದೇ ವ್ಯವಸ್ಥಿತವಾದ ಊಟ -ಉಪಹಾರದ ವ್ಯವಸ್ಥೆ, ಜೊತೆಗೆ ಜೇಮ್ಸ್ ಬ್ಯಾಂಡಿನ ಝೇಂಕಾರ ಕಿವಿಗೆ ಅಪ್ಪಳಿಸುತ್ತದೆ. ಕರಾವಳಿಯ ಮಾತಿನ ಮಲ್ಲ, ನಿರೂಪಣೆಯ ಮೋಡಿಗಾರ ಶ್ರೀ ಸತೀಶ್ ಶೆಟ್ಟಿ ಅವರ ಮಾತುಗಳು ಸೆಳೆಯುತ್ತದೆ. ಭಾಗವಹಿಸಿದ ಎಲ್ಲಾ ಪಂಚಾಯತ್ ಗೂ ಗೌರವದ ಸ್ಮರಣಿಕೆ ಹೀಗೆ ಇನ್ನಷ್ಟೂ ಹೊಳಪಿನ ಹೊಳಪಾದ ವಿಶೇಷತೆಗಳು.
ಈಗ ಮತ್ತೆ ಬರುತ್ತಿದೆ ಹೊಳಪು ನೆನಪಿನ ದಿಬ್ಬಣದೊಂದಿಗೆ, ಹೊಸ ಹೊಸ ಆಕರ್ಷಣೆಯೊಂದಿಗೆ ಒಟ್ಟು 388 ಗ್ರಾಮ ಪಂಚಾಯತ್,2 ಜಿಲ್ಲಾ ಪಂಚಾಯತ್ 8 ತಾಲ್ಲೂಕು ಪಂಚಾಯತ್, 1 ಮಹಾನಗರ ಪಾಲಿಕೆ, 15 ನಗರ ಸಭೆ – ಪುರಸಭೆ ಒಟ್ಟು 9000ಸಾವಿರ ಜನಪ್ರನಿಧಿಗಳ ಹಾಗೂ ಸಿಬ್ಬಂದಿಗಳ ಸಮ್ಮಿಲನವಾಗಲಿದೆ . ಇದೇ ಡಿಸೆಂಬರ್ 28 ರಂದು ಕೋಟದಲ್ಲಿ ನಡೆಯಲಿದೆ. ರಾಜಕೀಯದ ಗುದ್ದಿನಾಟದ ನಡುವೆ ಸ್ಥಳೀಯಾಡಳಿತ ಹಾಗೂ ತ್ರಿಸ್ತರದ ಜನಪ್ರತಿನಿಧಿಗಳು, ಒಂದೇ ಎಂಬ ಪಕ್ಷ ಭೇದ ಮರೆತು ಸಂಭ್ರಮಿಸುವ ಆ ಘಳಿಗೆಯಲ್ಲಿ ನೀವು ಇರದಿದ್ದರೆ ಹೇಗೆ……ನೀವು ಬನ್ನಿ ಪಂಚಾಯತ್ ರಾಜ್ ವ್ಯವಸ್ಥೆಯ ಸಬಲೀಕರಣದತ್ತ ದಿಟ್ಟ ಹೆಜ್ಜೆ ಜೊತೆಯಾಗಿ ಇಡೋಣ……

