ಸಾಧಿಸುವ ಛಲವಿದ್ದರೆ ಸಾಧನೆ ಸಾಧ್ಯ : ಶ್ರೀ ಆನಂದ್ ಸಿ ಕುಂದರ್
ಕೋಟ : ಬದುಕಿನಲ್ಲಿ ಏನಾದರೂ ಸಾಧಿಸುವ ಛಲವಿದ್ದು, ಅದರ ಕಡೆ ಹೆಚ್ಚು ಗಮನ ಹರಿಸಿ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಸಾಧನೆ ಸಾಧ್ಯ ಎಂದು ಶ್ರೀಕ್ಷೇತ್ರ ಅಮೃತೇಶ್ವರಿ ದೇವಸ್ಥಾನದ ಧರ್ಮದರ್ಶಿ ಗಳಾದ ಶ್ರೀ ಆನಂದ್ ಸಿ ಕುಂದರ್ ತಿಳಿಸಿದರು.
ಅವರು ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ)ಕೋಟ,ಡಾ|| ಕಾರಂತ ಟ್ರಸ್ಟ್(ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲೆಯ ಮೊದಲ ಯುವ ಸಾಹಿತ್ಯ-ಸಂಸ್ಕೃತಿ ಸಮ್ಮೆಳನ ತಿಂಗಳ ಪುರಸ್ಕಾರ ಪ್ರದಾನ, ಅಭಿನಂದನಾ ಸಮಾರಂಭ ಅನಘ್ರ್ಯ-2021(ಚಮತ್ಕಾರದ ಬೆರಗು) ಕಾರ್ಯಕ್ರಮ ಸಮಾರೋಪ ಸಮಾರಂಭ ಹಾಗೂ ಸಾಧಕರಿಗೆ ತಿಂಗಳ ದತ್ತಿ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಸುರೇಂದ್ರ ಶೆಟ್ಟಿ ಸ್ಮಾರಕ ಕುಂದಕನ್ನಡ ಶ್ರೀ ಪುರಸ್ಕಾರ ಶ್ರೀಸ್ವರಾಜ್ಯ ಲಕ್ಷ್ಮೀ, ಮಂಜುನಾಥ ಕೋಟ ರಂಗಭೂಮಿ ಪುರಸ್ಕಾರ ಶ್ರೀ ರವಿ ಎಸ್ ಬೈಕಾಡಿ, ಕೆ.ಸಿ ಕುಂದರ್ ಉದ್ಯಮಿ ಪುರಸ್ಕಾರ ಶ್ರೀಶಿವರಾಮ ಕೊಠಾರಿ, ರಾಘವೇಂದ್ರ ಉರಾಳ ಸಾಂಸ್ಕೃತಿಕ ಪುರಸ್ಕಾರ ಶ್ರೀ ಅವಿನಾಶ್ ಕಾಮತ್, ಪಿ. ಕಾಳಿಂಗ ರಾವ್ ಸಂಗೀತ ಪುರಸ್ಕಾರ ಶ್ರೀ ಶಂಭು ಭಟ್, ಕೋಟ ವೈಕುಂಠ ಯಕ್ಷ ಪುರಸ್ಕಾರ ಶ್ರೀ ಪಿ.ವಿ ಆನಂದ್ ಸಾಲಿಗ್ರಾಮ, ಡಾ. ಆನಂದ್ ಶೆಟ್ಟಿ ಸಮಾಜಸೇವಾ ಪುರಸ್ಕಾರ ಶ್ರೀ ಜೀವನ್ ಮಿತ್ರ ನಾಗರಾಜ್ ಪುತ್ರನ್, ಉಪೇಂದ್ರ ಐತಾಳ್ ಕೃಷಿ ಪುರಸ್ಕಾರ ಶ್ರೀ ಜಗದೀಶ್ ಉಪಾಧ್ಯ ಅವರಿಗೆ ಪ್ರದಾನ ಮಾಡಲಾಯಿತು.
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಆಯ್ಕೆಗೊಂಡ ಸುಗಂಧಿ ಚಲನಚಿತ್ರದ ಬಗ್ಗೆ ಶ್ರೀ ಬಾಲಕೃಷ್ಣ ಕೊಡವೂರು ಅವರು ಅಭಿನಂದನಾ ಭಾಷಣ ಮಾಡಿದರು. ಚಲನಚಿತ್ರದ ಕಲಾವಿದರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕ.ಸಾ.ಪದ ಜಿಲ್ಲಾಧ್ಯಕ್ಷ ಶ್ರೀ ನೀಲಾವರ ಸುರೇಂದ್ರ ಅಡಿಗ, ಥೀಮ್ ಪಾರ್ಕ್ ನ ವಿಶೇಷ ಕರ್ತವ್ಯಾಧಿಕಾರಿ ಶ್ರೀಮತಿ ಪೂರ್ಣಿಮ, ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀವಾಸು ಪೂಜಾರಿ, ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀನರೇಂದ್ರ ಕುಮಾರ್ ಕೋಟ, ರವೀಂದ್ರ ಐತಾಳ್ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಸಾದ್ ಬಿಲ್ಲವ ಸ್ವಾಗತಿಸಿ, ಶಿಕ್ಷಕ ಶ್ರಿ ಸತೀಶ್ ವಡ್ಡರ್ಸೆ ನಿರೂಪಿಸಿದರು.

