ಯಕ್ಷಗಾನ ಕರಾವಳಿ ಜನರ ಜೀವನಾಡಿ- ಶ್ರೀ ಸುರೇಶ್ ಕೋಟ
ಕೋಟ : ಯಕ್ಷಗಾನ ಕರಾವಳಿ ಜನರ ಬದುಕಲ್ಲಿ ಹಾಸುಹೊಕ್ಕಾಗಿದೆ, ಇದಕ್ಕೆ ಜನರು ವಿಶೇಷ ಸ್ಥಾನ ಮಾನ ನೀಡುತ್ತಿದ್ದು, ಯಕ್ಷಗಾನ ಮನೋರಂಜನೆ ಜೊತೆಗೆ ಬದುಕಿಗೆ ಸಾಕಷ್ಟು ಅನುಭವಗಳನ್ನು ನೀಡುತ್ತದೆ. ಯಕ್ಷಗಾನ ಎಷ್ಟೊ ಕಲಾವಿದರ ಬದುಕಿಗೆ ಆಸರೆಯಾಗಿದ್ದು ಅದರಿಂದನೇ ಜೀವನ ಸಾಗಿಸುತ್ತಿದ್ದಾರೆ. ಕೋವಿಡ್ ನಿಂದಾಗಿ ಯಕ್ಷಗಾನ ಕಲಾವಿದರ ಬದುಕು ಅತಂತ್ರ ಸ್ಥಿತಿಯಲ್ಲಿ ಇದೆ ಎಂದು ಖ್ಯಾತ ಯಕ್ಷಗಾನ ಕಲಾವಿದ ಶ್ರೀ ಸುರೇಶ್ ಕೋಟ ಅವರು ಹೇಳಿದರು.
ಅವರು ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ ಇವರ ಆಶ್ರಯದಲ್ಲಿ ನಡೆದ ತಿಂಗಳ ಕಾರ್ಯಕ್ರಮ ಯಕ್ಷ-ಗಾನ-ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ದಿನೇಶ್, ಉಪಾಧ್ಯಕ್ಷ ಶ್ರೀ ವಾಸು ಪೂಜಾರಿ, ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಕೋಟ ಅವರು ಉಪಸ್ಥಿತರಿದ್ದರು.
ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಜನ್ಸಾಲೆ ರಾಘವೇಂದ್ರ ಆಚಾರ್ಯ , ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರ ಭಾಗವತಿಕೆಯಲ್ಲಿ ಅಕ್ಷಯ ಆಚಾರ್ಯ ಬಿದ್ಕಲ್ಕಟ್ಟೆ ಮದ್ದಳೆ, ಕೋಟ ಶಿವಾನಂದ ಅವರ ಚಂಡೆಯಲ್ಲಿ ಯಕ್ಷ-ಗಾನ-ವೈಭವ ಕಾರ್ಯಕ್ರಮ ನಡೆಯಿತು.
